Viral Video: ಆಟೋ ಗುದ್ದಿಸಿ ನ್ಯಾಯಾಧೀಶರ ಹತ್ಯೆ, ಉನ್ನತಮಟ್ಟದ ತನಿಖೆ ಆದೇಶ

ಗ್ಯಾಂಗ್‌ಸ್ಟರ್‌ಗೆ ಜಾಮೀನು ನೀಡದ್ದಕ್ಕೆ ವಾಹನ ಗುದ್ದಿಸಿ ನ್ಯಾಯಾಧೀಶರ ಹತ್ಯೆ..?!

Written by - Puttaraj K Alur | Last Updated : Jul 29, 2021, 04:37 PM IST
  • ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ನ್ಯಾಯಾಧೀಶರಿಗೆ ಹಿಂದಿನಿಂದ ಆಟೋರಿಕ್ಷಾ ಗುದ್ದಿಸಿ ಹತ್ಯೆ ಮಾಡಲಾಗಿದೆ
  • ಗ್ಯಾಂಗ್‌ಸ್ಟರ್‌ಗೆ ಜಾಮೀನು ನೀಡದ್ದಕ್ಕೆ ವಾಹನ ಗುದ್ದಿಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ
  • ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Trending Photos

ರಾಂಚಿ: ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ನ್ಯಾಯಾಧೀಶರ ಮೇಲೆ ಆಟೋ ರಿಕ್ಷಾ ಗುದ್ದಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಾಯುವಿಹಾರಕ್ಕೆಂದು ತೆರಳಿದ್ದ ವೇಳೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಜಾರ್ಖಂಡ್‌ನ ಧನಬಾದ್‌ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಉತ್ತಮ್‌ ಆನಂದ್‌ ಸಾವನ್ನಪ್ಪಿದ್ದರು. ಸದರ್ ಪೊಲೀಸ್ ಠಾಣೆ ಪ್ರದೇಶದ ಜಿಲ್ಲಾ ನ್ಯಾಯಾಲಯದ ಬಳಿಯ ರಣಧೀರ್ ವರ್ಮಾ ಚೌಕ್ ನಲ್ಲಿ ಈ ಘಟನೆ ನಡೆದಿತ್ತು.

ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸೆರೆಯಾಗಿದೆ. ವಾಯುವಿಹಾರಕ್ಕೆಂದು ತೆರಳಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಟೋ ರಿಕ್ಷಾ ಚಾಲಕರೊಬ್ಬರು ಸ್ಥಳೀಯ ಶಾಹಿದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಅಂತಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಗ್ಯಾಂಗ್‌ಸ್ಟರ್‌ಗೆ ಜಾಮೀನು ನೀಡದ್ದಕ್ಕೆ ವಾಹನ ಗುದ್ದಿಸಿ ನ್ಯಾಯಾಧೀಶರ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿವೆ. ಅನೇಕ ನೆಟಿಜನ್ ಗಳು ಈ ಬಗ್ಗೆ ಪ್ರಶ್ನಿಸುತ್ತಿದ್ದು, ಉದ್ದೇಶಪೂರ್ವಕವಾಗಿಯೇ ಆಟೋರಿಕ್ಷಾ ಚಾಲಕ ನ್ಯಾಯಾಧೀಶರಿಗೆ ಡಿಕ್ಕಿ ಹೊಡೆಸಿ ಅವರ ಸಾವಿಗೆ ಕಾರಣವಾಗಿದ್ದಾನೆ. ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಕೆ ನಡೆಸುತ್ತಿದ್ದಾರೆ, ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಈ ನಡುವೆ ನ್ಯಾಯಾಧೀಶರ ಸಾವಿನ ತನಿಖೆಗಾಗಿ ಜಾರ್ಖಂಡ್ ನಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ದೊರೆತ ಬಳಿಕ ತನಿಖಾ ತಂಡವನ್ನು ರಚಿಸಲಾಗಿದೆ. ಆಟೋರಿಕ್ಷಾ ಚಾಲಕ ಉದ್ದೇಶಪೂರ್ವಕವಾಗಿಯೇ ರಸ್ತೆಯ ಒಂದು ಬದಿ ಹೋಗುತ್ತಿದ್ದ ನ್ಯಾಯಾಧೀಶರಿಗೆ ಡಿಕ್ಕಿ ಹೊಡೆಸಿರುವುದು, ಬಳಿಕ ಏನಾಯಿತು ಎಂಬುದನ್ನು ಗಮನಿಸದೆ ಆಟೋ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿರುವುದು ಸೆರೆಯಾಗಿದೆ.

‘ನಾನು ನಗರ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಿದ್ದೇನೆ. ಘಟನೆಯಲ್ಲಿ ಏನಾಗಿದೆ ಎಂಬುದನ್ನು ಅವರು ಪರಿಶೀಲಿಸುತ್ತಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಎಲ್ಲಾ ಸಂಬಂಧಿತ ಅಂಶಗಳನ್ನು ವಿಶ್ಲೇಷಿಸಿ ವಾಹನವನ್ನು ಗುರುತಿಸಲಾಗುತ್ತದೆ. ಈ ಸಂಬಂಧ ದೂರು ನೀಡಲು ಮೃತ ನ್ಯಾಯಾಧೀಶರ ಕುಟುಂಬ ಸದಸ್ಯರನ್ನು ನಾವು ಗೌರವಿಸಿದ್ದೇವೆ. ನಾವು ಕೂಡ ಎಫ್‌ಐಆರ್(FIR) ದಾಖಲಿಸುತ್ತೇವೆ’ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ. ಧನಬಾದ್‌ ನ್ಯಾಯಾಧೀಶರ ಹತ್ಯೆ ನಡೆದಿದೆ ಎನ್ನಲಾದ ಕುರಿತು ಜಾರ್ಖಂಡ್‌ ಹೈಕೋರ್ಟ್‌(Jharkhand High Court) ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories